ಬಾಡಿಗೆ ರೂಂನಲ್ಲಿ ಬಿಬಿಎ ವಿದ್ಯಾರ್ಥಿನಿ ಮೃತದೇಹ ಪತ್ತೆ; ಪ್ರಿಯಕರನೇ ಕೊಂದಿರುವ ಶಂಕೆ..!
ಬಾಡಿಗೆ ರೂಂನಲ್ಲಿ ಬಿಬಿಎ ವಿದ್ಯಾರ್ಥಿನಿ ಮೃತದೇಹ ಪತ್ತೆ; ಪ್ರಿಯಕರನೇ ಕೊಂದಿರುವ ಶಂಕೆ..!
ಬೆಂಗಳೂರು: ನೆಲಮಂಗಲದ ಸಮೀಪದ ತಮ್ಮೇನಹಳ್ಳಿಯಲ್ಲಿ 21 ವರ್ಷದ ಬಿಬಿಎ ವಿದ್ಯಾರ್ಥಿನಿ ದೇವಿಶ್ರೀ ಎಂಬುವವರ ಮೃತದೇಹ ಪತ್ತೆಯಾಗಿದೆ. ಆಕೆಯ ಪ್ರಿಯಕರ ಪ್ರೇಮವರ್ಧನ್ ಎಂಬಾತ ಆಕೆಯನ್ನು ಸ್ನೇಹಿತನ ಮನೆಗೆ ಕರೆಸಿಕೊಂಡಿದ್ದ. ಅಲ್ಲಿ ಕತ್ತು ಹಿಸುಕಿ ಕೊಲೆ ಮಾಡಿ, ಕೋಣೆಯ ಹೊರಗಿನಿಂದ ಬೀಗ ಹಾಕಿ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಮಾದನಾಯಕನಹಳ್ಳಿ ಪೊಲೀಸರು ಆರೋಪಿ ಪ್ರಿಯತಮನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಬೆಂಗಳೂರಿನ ನೆಲಮಂಗಲದ ತಮ್ಮೇನಹಳ್ಳಿಯಲ್ಲಿ 21 ವರ್ಷದ ವಿದ್ಯಾರ್ಥಿನಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಮಾದನಾಯಕನಹಳ್ಳಿ ಪೊಲೀಸರು ಇದು ಕೊಲೆ ಎಂದು ಶಂಕಿಸಿದ್ದು, ನಾಪತ್ತೆಯಾಗಿರುವ ಆರೋಪಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.
ಅನುಮಾನಸ್ಪದವಾಗಿ ಮೃತಪಟ್ಟ ಯುವತಿಯನ್ನು ದೇವಿಶ್ರೀ (21) ಎಂದು ಗುರುತಿಸಲಾಗಿದೆ. ಮೂಲತಃ ಆಂಧ್ರಪ್ರದೇಶದವರಾದ ದೇವಿಶ್ರೀ ಖಾಸಗಿ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ದೇವಿಶ್ರೀ ಭಾನುವಾರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಈ ಬಗ್ಗೆ ಮನೆಯ ಮಾಲೀಕ ಸೋಮವಾರ ಮುಂಜಾನೆ ಮಾದನಾಯಕನ ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಘಟನಾ ಸ್ಥಳ ಪರಿಶೀಲಿಸಿದರು. ಪ್ರೇಮ್ ವರ್ಧನ್ ಎಂಬ ವ್ಯಕ್ತಿಯು ದೇವಿಶ್ರೀಯ ಕತ್ತು ಹಿಸುಕಿ ಅಥವಾ ಉಸಿರುಗಟ್ಟಿಸಿ ಕೊಂದಿದ್ದಾನೆ ಎಂದು ಮದನಾಯಕನಹಳ್ಳಿ ಪೊಲೀಸರು ಶಂಕಿಸಿದ್ದಾರೆ.
ಕತ್ತು ಹಿಸುಕಿ ಕೊಲೆ ಶಂಕೆ
ಭಾನುವಾರ ಬೆಳಿಗ್ಗೆ ಸುಮಾರು 9:30 ರ ಸುಮಾರಿಗೆ ಪ್ರೇಮ್ ವರ್ಧನ್ ಮತ್ತು ದೇವಿಶ್ರೀ ಕೋಣೆಗೆ ಬಂದಿದ್ದರು. ಆತ ಆಕೆಯನ್ನು ತನ್ನ ಸ್ನೇಹಿತನ ಮನೆಗೆ ಕರೆತಂದಿದ್ದನು. ರಾತ್ರಿ 8:30 ರವರೆಗೂ ಅಲ್ಲಿಯೇ ಇದ್ದರು. ನಂತರ, ಪ್ರೇಮ್ ಕೋಣೆಗೆ ಹೊರಗಿನಿಂದ ಬೀಗ ಹಾಕಿ ಪರಾರಿಯಾಗಿದ್ದಾನೆ. ಈ ಕೊಲೆಗೆ ನಿಖರವಾದ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ.
ಪ್ರೇಮವರ್ಧನ್ನ ಸ್ನೇಹಿತ ಮನೆಗೆ ಮರಳಿದಾಗ ಯುವತಿಯ ಶವ ಪತ್ತೆಯಾಗಿದೆ. ತಕ್ಷಣವೇ ಆತ ಮನೆ ಮಾಲೀಕರಿಗೆ ವಿಷಯ ತಿಳಿಸಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ದೇವಿಶ್ರೀ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. (ಪ್ರೀತಿ ಒಪ್ಪದಿದ್ದಕ್ಕೆ ಯುವತಿಯ ಕೊಂದ ಯುವಕ, ಆರೋಪಿಗಾಗಿ ಶೋಧ)
ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಲಾಗುತ್ತದೆ. ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸುಳಿವುಗಳು ಲಭ್ಯವಾಗಿದ್ದು, ಆದಷ್ಟು ಬೇಗ ಆರೋಪಿಯನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಎಂದು ಪೊಲೀಸರು ಖಾಸಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
Comments
Post a Comment