ಟ್ರಂಪ್​ಗೆ ಸೆಡ್ಡು ಹೊಡೆದ ಟೆಹ್ರಾನ್; ಯುದ್ಧ ನಿಲ್ಲಿಸಲು 5 ಷರತ್ತು ವಿಧಿಸಿದ ಇರಾನ್..!

ಟ್ರಂಪ್​ಗೆ ಸೆಡ್ಡು ಹೊಡೆದ ಟೆಹ್ರಾನ್; ಯುದ್ಧ ನಿಲ್ಲಿಸಲು 5 ಷರತ್ತು ವಿಧಿಸಿದ ಇರಾನ್..!
ಟೆಹ್ರಾನ್, ಮಾರ್ಚ್ 25: ಕಳೆದ 2 ದಿನಗಳಿಂದ ಡೊನಾಲ್ಡ್ ಟ್ರಂಪ್ (Donald Trump) ಈ ಯುದ್ಧ ಸಾಕಾಗಿದೆ ಎಂಬಂತೆ ವರ್ತಿಸಿದ್ದರು. ಇರಾನ್ ಜೊತೆ ಕದನವಿರಾಮದ ಸುಳಿವನ್ನೂ ನೀಡಿದ್ದರು. ಹಾಗೇ, ಇರಾನ್ ಮೇಲಿನ ದಾಳಿಯನ್ನು ಕೊನೆಗೊಳಿಸಲು 15 ಅಂಶಗಳ ಶಾಂತಿ ಯೋಜನೆಯನ್ನು ಘೋಷಿಸಿದ್ದರು.

ಆದರೆ, ಅವರ ಈ ನಿರ್ಧಾರವನ್ನು ತಿರಸ್ಕರಿಸಿರುವ ಇರಾನ್ ಅಮೆರಿಕಕ್ಕೆ ತಕ್ಕ ತಿರುಗೇಟು ನೀಡಿದೆ. ಈ ಯುದ್ಧವನ್ನು ಯಾವಾಗ ಕೊನೆಗೊಳಿಸಬೇಕು, ಹೇಗೆ ಕೊನೆಗೊಳಿಸಬೇಕೆಂದು ಟ್ರಂಪ್ ನಿರ್ಧರಿಸಲು ನಾವು ಅವಕಾಶ ನೀಡುವುದಿಲ್ಲ. ಈ ಯುದ್ಧ ನಿಲ್ಲಬೇಕಾದರೆ ನಾವು ಹಾಕುವ 5 ಷರತ್ತುಗಳನ್ನು ಒಪ್ಪಿಕೊಳ್ಳಬೇಕು ಎಂದು ಇರಾನ್ ಘೋಷಿಸಿದೆ.
ತನ್ನ ಷರತ್ತುಗಳು ಪೂರೈಸಿದರೆ ಮಾತ್ರ ಯುದ್ಧವನ್ನು ಕೊನೆಗೊಳಿಸುವುದಾಗಿ ಇರಾನ್ ಹೇಳಿದೆ. ಕದನ ವಿರಾಮಕ್ಕೆ ಸಮಯವನ್ನು ನಿಗದಿಪಡಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಪ್ರಯತ್ನವನ್ನು ದೃಢವಾಗಿ ತಿರಸ್ಕರಿಸಿರುವ ಇರಾನ್ ಅಮೆರಿಕ ಪಶ್ಚಿಮ ಏಷ್ಯಾದ ಯುದ್ಧದಲ್ಲಿ ಅತಿಯಾಗಿ ಮೂಗು ತೂರಿಸುತ್ತಿದೆ ಎಂದು ಟೀಕಿಸಿದೆ.

ಇದರ ನಡುವೆ ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಇರಾನ್ ದೃಢ ನಿಲುವನ್ನು ತೆಗೆದುಕೊಂಡಿದೆ. ಯುದ್ಧ ನಿಲ್ಲಿಸಲು ಇರಾನ್ ಹಾಕಿರುವ 5 ಪ್ರಮುಖ ಷರತ್ತುಗಳು ಹೀಗಿವೆ.

1. ಅಮೆರಿಕ ಮತ್ತು ಇಸ್ರೇಲ್‌ನಿಂದ ಆಕ್ರಮಣಶೀಲತೆ ಮತ್ತು ಟಾರ್ಗೆಟ್ ಮಾಡಿದ ಹತ್ಯೆಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದು.

2. ಇರಾನ್ ವಿರುದ್ಧ ಮುಂದಿನ ದಿನಗಳಲ್ಲಿ ಯಾವುದೇ ಮಿಲಿಟರಿ ಕ್ರಮ ಅಥವಾ ದಾಳಿ ನಡೆಸುವುದಿಲ್ಲ ಎಂದು ಭರವಸೆ ನೀಡುವುದು;

3. ಯುದ್ಧ ಸಂಬಂಧಿತ ನಷ್ಟಗಳು ಮತ್ತು ಹಾನಿಗಳಿಗೆ ಸೂಕ್ತವಾದ ಪರಿಹಾರ ನೀಡುವುದು.

4. ಮಿತ್ರ ಗುಂಪುಗಳು ಸೇರಿದಂತೆ ಎಲ್ಲಾ ಪ್ರಾದೇಶಿಕ ರಂಗಗಳಲ್ಲಿ ಹಗೆತನಕ್ಕೆ ಅಂತ್ಯ ಹಾಡುವುದು.

5. ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್‌ಗೆ ಅಧಿಕಾರದ ಅಧಿಕೃತ ಮಾನ್ಯತೆ ನೀಡುವುದು.

‘ನಮ್ಮ ಈ ಷರತ್ತುಗಳನ್ನು ಒಪ್ಪಿದ ಮೇಲೆ ಯುದ್ಧ ಕೊನೆಗೊಳ್ಳುತ್ತದೆ’ ಎಂದು ಇರಾನ್ ಸ್ಪಷ್ಟವಾಗಿ ತಿಳಿಸಿದೆ. ಇವೆಲ್ಲದಕ್ಕೆ ಇಸ್ರೇಲ್ ಹಾಗೂ ಅಮೆರಿಕ ಒಪ್ಪುವ ಸಾಧ್ಯತೆ ಕಡಿಮೆ ಇರುವುದರಿಂದ ಸದ್ಯಕ್ಕೆ ಯುದ್ಧ ನಿಲ್ಲುವುದು ಕೂಡ ಅನುಮಾನ ಎನ್ನಲಾಗುತ್ತಿದೆ. ಹಾಗೇ, ಯಾವುದೇ ಕದನ ವಿರಾಮದ ಸಮಯವನ್ನು ಇರಾನ್ ಮಾತ್ರ ನಿರ್ಧರಿಸುತ್ತದೆಯೇ ವಿನಃ ಬೇರೆ ದೇಶಗಳು ಇದನ್ನು ನಿರ್ಧರಿಸುವಂತಿಲ್ಲ ಎಂದು ಇರಾನಿನ ಅಧಿಕಾರಿಗಳು ಹೇಳಿದ್ದಾರೆ. ಈ ಎಲ್ಲಾ ಷರತ್ತುಗಳು ಈಡೇರುವವರೆಗೆ ಮಿಲಿಟರಿ ಕಾರ್ಯಾಚರಣೆಗಳು ಮುಂದುವರಿಯುತ್ತವೆ ಎಂದು ಇರಾನ್ ಸ್ಪಷ್ಟಪಡಿಸಿದೆ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "